ಹೊಸ ಕ್ರಿಮಿನಲ್ ಕಾನೂನಿನಡಿ ಮೊದಲ ದಾಖಲು; ಕಾನೂನುಗಳ ಜಾರಿಗೆ ಆ್ಯಪ್ ರಚನೆ: ಡಾ ಜಿ ಪರಮೇಶ್ವರ್ ಇಂದಿನಿಂದ ಮೂರು ಹೊಸ ಕಾನೂನುಗಳು ಜಾರಿಯಾಗಿವೆ. ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಮಾಡಿದ್ದೇವೆ. ಇನ್ಮುಂದೆ ದಾಖಲಾಗುವ ಕೇಸ್ಗಳಿಗೆ ಅದು ಅನ್ವಯ ಆಗಲಿದೆ. ಬೆಂಗಳೂರು: ದೇಶಾದ್ಯಂತ ಪ್ರಮುಖ ಬದಲಾವಣೆ ಐಪಿಸಿ, ಸಿಆರ್ ಪಿಸಿ, ಎವಿಡೆನ್ಸ್ ಆಕ್ಟ್ ಗಳು ಜುಲೈ 1 ರಿಂದ ದೇಶದಲ್ಲಿ ಜಾರಿ ಬಂದಿದ್ದು, 3 ಹೊಸ ಅಪರಾಧ ಕಾನೂನುಗಳು ಜಾರಿಗೆ ಸಂಬಂಧಿಸಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ( ) ಪ್ರತಿಕ್ರಿಯೆ ನೀಡಿದ್ದು ಕಾನೂನುಗಳ ಜಾರಿಗೆ ಆ್ಯಪ್ ರಚಿಸಿದ್ದೇವೆ ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಇಂದಿನಿಂದ ಮೂರು ಹೊಸ ಕಾನೂನುಗಳು ಜಾರಿಯಾಗಿವೆ. ಕಾನೂನುಗಳ ಜಾರಿಗೆ ನಾವು ಒಂದು ಆ್ಯಪ್ ಮಾಡಿದ್ದೇವೆ. ಇನ್ಮುಂದೆ ದಾಖಲಾಗುವ ಕೇಸ್ಗಳಿಗೆ ಅದು ಅನ್ವಯ ಆಗಲಿದೆ. ಇದರ ಪರಿಣಾಮ ಏನು ಅಂತ ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಯಶಸ್ಸು ಗೊತ್ತಾಗುತ್ತದೆ. ಇವತ್ತಿನಿಂದ ಆಚೆಗೆ ಯಾವೆಲ್ಲ ಕೇಸ್ಗಳು ಬರುತ್ತವೋ ಅವು ಹೊಸ ಕಾನೂನುಗಳಡಿ ದಾಖಲಾಗುತ್ತವೆ. ನಾವು ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ನೀಡಿದ್ದೇವೆ ಎಂದರು.ಕಾನ್ಸ್‌ಟೇಬಲ್ನಿಂದ ಹಿಡಿದು ಎಲ್ಲರಿಗೂ ತರಬೇತಿ ನೀಡಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಹ ಸಿದ್ಧಪಡಿಸಲಾಗಿದೆ. ಇಡೀ ದೇಶದಲ್ಲಿ ಮೂರು ಕಾನೂನುಗಳು ಜಾರಿಯಾಗಿವೆ. ಫೀಡ್ ಬ್ಯಾಕ್ ನೋಡಿಕೊಂಡು ಪರಿಷ್ಕರಣೆ ಮಾಡಬಹುದು ಎಂದರು.ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರುತ್ತಿದ್ದಂತೆ, ಭಾರತೀಯ ನಾಗ್ರಿಕ್ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 173 ರ ಅಡಿಯಲ್ಲಿ ಮೊದಲ ಎಫ್‌ಐಆರ್ ಅನ್ನು ಸೋಮವಾರ ದೆಹಲಿಯಲ್ಲಿ ದಾಖಲಿಸಲಾಗಿದೆ.ದೆಹಲಿ ರೈಲು ನಿಲ್ದಾಣದಲ್ಲಿ ಫುಟ್‌ ಓವರ್‌ ಬ್ರಿಡ್ಜ್‌ಗೆ ಅಡ್ಡಿಪಡಿಸಿ ಮಾರಾಟ ನಡೆಸಿದ ಬೀದಿಬದಿ ವ್ಯಾಪಾರಿಯೊಬ್ಬನ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ 285ರ ಅಡಿಯಲ್ಲಿ ಕೇಸು ದಾಖಲಾಗಿದೆ.ಎಫ್‌ಐಆರ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಆರೋಪಿಯು ತಂಬಾಕು ಉತ್ಪನ್ನಗಳು ಮತ್ತು ಮುಖ್ಯ ರಸ್ತೆಯ ಬಳಿ ಇರುವ ಗಾಡಿಯಿಂದ ನೀರನ್ನು ಮಾರಾಟ ಮಾಡುತ್ತಿದ್ದು, ಇದರಿಂದಾಗಿ ದಾರಿಹೋಕರಿಗೆ ಅಡಚಣೆ ಮತ್ತು ಅನನುಕೂಲತೆ ಉಂಟಾಗಿದೆ.ಇಂದಿನಿಂದ ಎಲ್ಲಾ ಹೊಸ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಲಾಗುತ್ತದೆ. ಆದಾಗ್ಯೂ, ಈ ಹಿಂದೆ ದಾಖಲಾದ ಪ್ರಕರಣಗಳು ಅಂತಿಮ ವಿಲೇವಾರಿಯಾಗುವವರೆಗೆ ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ.ಯಾರಿಗೇ ಆದರೂ ಶಿಕ್ಷೆ ಖಂಡಿತ: ವಾಲ್ಮೀಕಿ ನಿಗಮ ಹಗರಣ ಕೇಸ್ ಬಗ್ಗೆ ಕೇಳಿದಾಗ, ವಾಲ್ಮೀಕಿ ಹಗರಣ ಕೇಸ್ ನ್ನು ಸಿಬಿಐ ಅಧಿಕಾರಿಗಳು ಕೂಡ ತನಿಖೆ ನಡೆಸುತ್ತಿದ್ದಾರೆ. ಎಸ್ಐಟಿ ಕೂಡ ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಲ್ಲುವುದಿಲ್ಲ. ತಪ್ಪು ಮಾಡಿದವರು ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗುತ್ತದೆ. ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಯಾರೇ ಇದ್ದರೂ ಶಿಕ್ಷೆ ಆಗುತ್ತದೆ ಎಂದರು.